ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ ?

ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ? ರಂಗೋಲಿಯ ಮಹತ್ವದ ಕುರಿತಾಗಿ ಇಲ್ಲಿದೆ ಮಾಹಿತಿ

ಮುಂಜಾನೆ ಮನೆಯ ಹೆಂಗಳೆಯರು ಎದ್ದು ಹೊಸಿಲಿಗೆ ಮತ್ತು ಮನೆಯ ಮುಂದೆ ನೀರು ಹಾಕಿ ರಂಗೋಲಿ ಹಾಕಿದರೆ ಮನೆಗೊಂದು ಲಕ್ಷಣವೆನ್ನುತ್ತಾರೆ. ಈ ರಂಗೋಲಿ ಹಾಕುವ ಸಂಪ್ರದಾಯವನ್ನು ಹಿಂದಿನ ಕಾಲದಿಂದ ಇಂದಿನವರೆಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಈಗೀಗ ಆಧುನಿಕತೆಗೆ ಒಗ್ಗಿಕೊಂಡ ಜನ, ರಂಗೋಲಿ ಹಾಕಲು ಸಮಯವಿಲ್ಲದೇ ರಂಗೋಲಿ ಚಿತ್ರವಿರುವ ಪ್ಲಾಸ್ಟಿಕ್‌ ಹಾಳೆಯ ಮನೆಯ ಬಾಗಿಲಿನ ಮುಂದೆ ಅಂಟಿಸಿಬಿಡುತ್ತಾರೆ. ಇನ್ನೂ ಕೆಲವರು ಪೈಂಟ್ ನಿಂದ ಒಮ್ಮೆ ರಂಗೋಲಿ ಹಾಕಿ ಸುಮ್ಮನೆ ಆಗಿ ಬಿಡುತ್ತಾರೆ. ಆದರೆ ಇದರಿಂದ ಯಾವುದೇ ಪರಿಣಾಮಗಳು ಉಂಟಾಗದು. ನಿಜವಾಗಿಯೂ ರಂಗೋಲಿಯ ಪ್ರಾಮುಖ್ಯತೆ ಏನು, ಅದರಿಂದ ಉಂಟಾಗುವ ಉಪಯೋಗಗಳೇನು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.

ಧಾರ್ಮಿಕ ಮಹತ್ವ

ರಂಗೋಲಿಯು ಬಣ್ಣಗಳ ಆಚರಣೆಯನ್ನು ಸಂಕೇತಿಸುವ ಸಂಸ್ಕೃತ ಪದ ‘ರಂಗವಲ್ಲಿ’ಯಿಂದ ಬಂದಿದೆ. ಇದು ಪ್ರಾಚೀನ ಭಾರತೀಯ ಕಲೆ, ಶಿಲ್ಪಕಲೆ ಹಾಗೂ ವರ್ಣಚಿತ್ರಗಳಿಗಿಂತಲೂ ಹಿಂದಿನದಾಗಿದೆ. ಯಾವುದೇ ಧಾರ್ಮಿಕ ಆಚರಣೆ ಇರಲಿ, ಹಬ್ಬ ಹರಿದಿನಗಳು ಇರಲಿ ರಂಗೋಲಿಯನ್ನು ಶುಭ ಸೂಚಕವಾಗಿ ಹಾಗೂ ಪ್ರಾಥಮಿಕ ಅವಶ್ಯಕತೆಯಾಗಿ ಬಳಸಲಾಗುತ್ತದೆ. ಹಬ್ಬ, ಆಚರಣೆ, ವಿವಾಹ, ಧಾರ್ಮಿಕ ಪೂಜೆ ಮುಂತಾದ ಶುಭ ಕಾರ್ಯಗಳಲ್ಲಿ ಹಾಕುವಂತಹ ರಂಗೋಲಿಯು ಆ ಸ್ಥಳಕ್ಕೆ ಧಾರ್ಮಿಕ ಸ್ಪರ್ಶವನ್ನು ನೀಡುತ್ತದೆ.

  ಮಂಗಳಾರತಿಯನ್ನು ಹೇಗೆ ತೆಗೆದುಕೊಳ್ಳಬೇಕು?

ರಂಗೋಲಿಯ ಉದ್ದೇಶ
ರಂಗೋಲಿಯನ್ನು ಎರಡು ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಒಂದು ಸೌಂದರ್ಯಕ್ಕಾಗಿ, ಇನ್ನೊಂದು ಶುಭವನ್ನು ಪಡೆಯಲು. ರಂಗೋಲಿಯಲ್ಲಿ ಬಿಡಿಸಿದಂತಹ ಚಿತ್ರಗಳು ಕೂಡಾ ಸಾಂಕೇತಿಕವಾಗಿರುತ್ತದೆ. ನೇರವಾದ ರಂಗೋಲಿ ರೇಖೆಗಳಿಗಿಂತ ಬಾಗಿದ ರೇಖೆಗಳು ಹೆಚ್ಚು ಸುಂದರವಾಗಿರುತ್ತದೆ. ಸಾಮಾನ್ಯವಾಗಿ ಮಹಿಳೆಯರೇ ರಂಗೋಲಿ ಹಾಕುವುದು ಹೆಚ್ಚು. ರಂಗೋಲಿ ಹಾಕಲು ಅವರಿಗೆ ಯಾವುದೇ ಅಚ್ಚು, ದಾರ, ಕುಂಚಗಳು ಬೇಕಾಗಿಲ್ಲ. ಬೆರಳಿನ ಮೂಲಕವೇ ವಿವಿಧ ವಿಧವಾದ ರಂಗೋಲಿಗಳು ಮಹಿಳೆಯರ ಬೆರಳಿನ ಮೂಡುತ್ತವೆ.

ಆಧ್ಯಾತ್ಮಿಕ ಮಹತ್ವ
ಹಿಂದೂ ಧರ್ಮದಲ್ಲಿ ಪ್ರತಿ ಹಬ್ಬ, ಶುಭ ಸಂದರ್ಭ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳು ದೇವತಾ ತತ್ವಕ್ಕೆ ಸಂಬಂಧಿಸಿರುವುದರಿಂದ ರಂಗೋಲಿ ಹಾಕಿದರೆ ಶುಭವೆಂದು ಹೇಳಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಆಯಾ ಆಚರಣೆಗೆ ಸಂಬಂಧಿಸಿದ ದೈವಿಕ ತತ್ವವು ವಾತಾವರಣದಲ್ಲಿ ಹೆಚ್ಚಾಗಿರುತ್ತದೆ. ಆ ದೇವತೆಯನ್ನು ಧಾರ್ಮಿಕ ಆಚರಣೆಯನ್ನು ಮಾಡುವ ಸ್ಥಳಕ್ಕೆ ಆಕರ್ಷಿಸಲು ರಂಗೋಲಿಯನ್ನು ಹಾಕಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ದೇವತಾ ಶಕ್ತಿಯನ್ನು ಆಕರ್ಷಿಸಲು ಆಯಾ ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನು ಹೆಚ್ಚು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿದರೆ, ಪ್ರತಿಯೊಬ್ಬರೂ ಕೂಡಾ ಹೆಚ್ಚಿನ ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯುತ್ತಾರೆಂದು ಹೇಳಲಾಗುತ್ತದೆ.

ಆಧ್ಯಾತ್ಮಿಕ ಪರಿಣಾಮ
ಆಧ್ಯಾತ್ಮಿಕ ತತ್ವದ ಪ್ರಕಾರ ನಿಮ್ಮ ಸುತ್ತಲಿನ ಶಬ್ದ,ಸ್ಪರ್ಶ, ರುಚಿ, ರೂಪ, ವಾಸನೆಯ ಶಕ್ತಿಯು ನಿಮ್ಮ ದೇಹ ಹಾಗೂ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ ಮಹಿಳೆಯು ರಂಗೋಲಿ ಹಾಕುವಾಗ ಅದು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ. ರಂಗೋಲಿಯ ರೂಪ ಹಾಗೂ ಬಣ್ಣದಲ್ಲಿ ಸಣ್ಣ ವ್ಯತ್ಯಾಸವನ್ನು ಮಾಡಿದರೂ, ಅದರ ಕಂಪನಗಳು ಬದಲಾಗುತ್ತವೆ.

  ಸರ್ವಜ್ಞನ ವಚನದಲ್ಲಿ ಒಗಟುಗಳು ಉತ್ತರ ಸಹಿತ

ಮನೆಯ ಬಾಗಿಲಿನಿಂದ ಒಳಗೆ ಪ್ರವೇಶಿಸುವವರ ಮನಸ್ಸಿನ ಮೇಲೆಯೂ ರಂಗೋಲಿಯು ಪ್ರಭಾವ ಬೀರುತ್ತದೆ. ಮನಸ್ಸಿಗೆ ಶಾಂತಿಯನ್ನು ನೀಡುವುದರ ಜೊತೆಗೆ ಮನೆಯ ಆಂತರಿಕ ಶಾಂತಿಯನ್ನೂ ಕಾಪಾಡುತ್ತದೆ. ನಿಮ್ಮ ಮನೋಸ್ಥಿತಿ ಬದಲಾಯಿಸಲು, ಮನಸ್ಸಿನ ಶಾಂತಿಯನ್ನು ಮರಳಿ ಪಡೆಯಲು ರಂಗೋಲಿ ಸಹಾಯಕ.

ಸಾತ್ವಿಕ ರಂಗೋಲಿ
ಸಾತ್ವಿಕ ರಂಗೋಲಿ, ರಂಗವಲ್ಲಿಯ ಒಂದು ವಿಧ. ಇದರ ಮುಖ್ಯ ಲಕ್ಷಣವೆಂದರೆ ಈ ರಂಗೋಲಿಯ ದೇವತಾತತ್ವದ ಪ್ರಸರಣದಿಂದಾಗಿ ಭಕ್ತರು ದೈವಿಕ ಶಕ್ತಿ, ಭಾವ (ಆಧ್ಯಾತ್ಮಿಕ ಭಾವನೆ), ಚೈತನ್ಯ(ದೈವಿಕ ಪ್ರಜ್ಞೆ), ಆನಂದ, ಶಾಂತಿ, ಹಾಗೂ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯುತ್ತಾರೆ. ಹಸ್ತಮುದ್ರಿಕಾ ಹಾಗೂ ಯೋಗ ವಿಜ್ಞಾನದ ಪ್ರಕಾರ ರಂಗೋಲಿ ಹಾಕುವಾಗ ತೋರು ಬೆರಳಿನ ತುದಿಯನ್ನು ಹೆಬ್ಬೆರಳು ಮೃದುವಾಗಿ ಒತ್ತುವುದರಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯು ಬಿಡುಗಡೆಯಾಗುವುದು. ಈ ಶಕ್ತಿಯು ಆತ್ಮವನ್ನು ಶುದ್ಧೀಕರಿಸುವುದಲ್ಲದೇ ರಕ್ತಪರಿಚಲನೆಗೂ ಸಹಾಯ ಮಾಡುತ್ತದೆ.

  ಅಮ್ಮನ ಘಟ್ಟ ಅಥವಾ ಜೇನು ಕಲ್ಲಮ್ಮ ಬೆಟ್ಟ

ರಂಗೋಲಿಯನ್ನು ಎಲ್ಲಿ ಹಾಕಬೇಕು
ರಂಗೋಲಿಯನ್ನು ಸಾಮಾನ್ಯವಾಗಿ ಮಣ್ಣಿನ ನೆಲ, ಸಗಣಿ ಸಾರಿಸಿದ ನೆಲ, ಟೈಲ್ಸ್ ನೆಲದ ಮೇಲೆಯೂ ಹಾಕಬಹುದು. ಯಾರಿಗಾದರೂ ಆರತಿ ಮಾಡುವಾಗ, ಕುಳ್ಳಿರಿಸುವ ಮರದ ಮಣೆಯ ಸುತ್ತಲೂ ರಂಗೋಲಿಯನ್ನು ಹಾಕಬಹುದು. ಜೊತೆಗೆ ಮಣೆಯ ಮುಂದೆಯೂ ರಂಗೋಲಿ ಹಾಕಬಹುದು.

ರಂಗೋಲಿ ಯಾಕೆ ಹಾಕಬೇಕು ?
ನೆಲವನ್ನು ಗುಣಿಸುವಾಗ ಅಥವಾ ಸಗಣಿ ಸಾರಿಸುವಾಗ ಅದು ನೆಲದ ಮೇಲೆ ಸೂಕ್ಷ್ಮರೇಖೆಗಳನ್ನು ಸೃಷ್ಟಿಸುತ್ತದೆ. ಇದು ಕೆಲವೊಂದು ಕಂಪನಗಳನ್ನು ಉಂಟುಮಾಡುತ್ತದೆ. ಈ ರೇಖೆಗಳು ಅನಿಯಮಿತವಾದುದರಿಂದ ಅವುಗಳ ಕಂಪನಗಳೂ ಕೂಡಾ ಅನಿಯಮಿತವಾಗಿರುತ್ತದೆ. ಇದು ದೇಹ, ಕಣ್ಣು ಹಾಗೂ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಹೀಗಾಗಿ ನೆಲದ ಮೇಲೆ ಶಂಖದ ರಂಗೋಲಿ, ಶುಭ ಚಿಹ್ನೆಗಳನ್ನೊಳಗೊಂಡ ರಂಗೋಲಿಯನ್ನು ವ್ಯವಸ್ಥಿತವಾಗಿ ಬಿಡಿಸಿದರೆ ಇವು ಪ್ರತಿಕೂಲ ಕಂಪನಗಳನ್ನು ನಿವಾರಿಸುವುದು ಹಾಗೂ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

Leave a Reply

Your email address will not be published. Required fields are marked *

Translate »