ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಓಂಕಾರ ಎಲ್ಲಾ ಮಂತ್ರಗಳ ರಾಜ

ಓಂಕಾರ..!

“ಓಂಕಾರ”ವನ್ನು ಎಲ್ಲಾ ಮಂತ್ರಗಳ ರಾಜ ಎಂದು ಕರೆಯಲಾಗುತ್ತದೆ. ಯಾಕೆಂದರೆ ಎಲ್ಲಾ ಮಂತ್ರಗಳ ಮೂಲವೇ “ಓಂ”. “ಓಂಕಾರ”ವು ಅನಂತವಾದ ಶಕ್ತಿಯನ್ನು ಪ್ರತಿನಿಧಿಸುತ್ತದೆ. “ಓಂಕಾರ”ಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. ದೇವರ ನಾಮ ಸ್ಮರಣೆಯೂ “ಓಂ” ಶಬ್ದದಿಂದಲೇ ಆರಂಭವಾಗುತ್ತದೆ. “ಓಂಕಾರ”ದ ಮೂಲಕ ಆರಂಭವಾಗುವ ದೇವರ ನಾಮಾರ್ಚನೆಯು ಹೆಚ್ಚು ಪರಿಣಾಮಕಾರಿಯಾದುದು ಎಂದು ವೇದದಲ್ಲಿ ಉಲ್ಲೇಖ ಮಾಡಲಾಗಿದೆ.
“ಓಂ” ಎನ್ನುವುದು ಒಂದು ಅಕ್ಷರವಲ್ಲ. ಅದು “ಅ, ಉ, ಮ” ಎಂಬ ಮೂರು ಅಕ್ಷರಗಳ ಸಂಗಮ. ಅ ಎಂದರೆ ಸೃಷ್ಟಿ. ಉ ಎಂದರೆ ವಿಕಸನ. ಮ ಎಂದರೆ ಮೌನ ಹಾಗೂ ವಿನಾಶ. ಹಾಗಾಗಿ ಈ ಒಂದೇ ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ. “ಓಂಕಾರ”ವನ್ನು ಪ್ರತಿ ದಿನ ಪಠಿಸಿದರೆ ನಿಮ್ಮ ಒತ್ತಡಗಳೆಲ್ಲಾ ನಿವಾರಣೆಯಾಗಿ ಮನಸ್ಸು ಆಹ್ಲಾದಕರವಾಗಿರುತ್ತದೆ. ಮುಂಜಾನೆ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಿ, ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ನಿರಾಳರಾಗಿ, ನಿಮ್ಮ ಎರಡೂ ಹುಬ್ಬಿನ ಮಧ್ಯ ಭಾಗವನ್ನು ಕೇಂದ್ರೀಕರಿಸಿ, “ಓಂಕಾರ”ವನ್ನು ನಿಧಾನವಾಗಿ ಪಠಿಸಿ. 21 ಬಾರಿ ಪಠಿಸುವುದು ಒಳ್ಳೆಯದು, ನಿಮ್ಮ ಉಸಿರಾಟದ ಮೂಲಕ ಪಠಣವನ್ನು ಲೆಕ್ಕಹಾಕಬಹುದು.
“ಓಂಕಾರ”ವನ್ನು ಹೇಳುವಾಗ ಮೂಗಿನಿಂದ ಒಳ ಸೇರಿದ ಗಾಳಿ ಅದೇ ಲಯದಲ್ಲಿ ಗಂಟಲು, ಎದೆ ಕೊನೆಗೆ ನಾಭಿಯ ಸುತ್ತಲೂ ವ್ಯಾಪಿಸಿ ಮತ್ತೂ ಕೆಳಗೆ ಹೋಗಿ ದೇಹದ ತುಂಬೆಲ್ಲಾ ವ್ಯಾಪಿಸಿ ನಿಧಾನಕ್ಕೆ ಉಸಿರು ಬಿಟ್ಟಾಗ ದೇಹದಲ್ಲಿ ಒಂದು ಕಂಪನ ಏರ್ಪಡುತ್ತದೆ.
ಉಪಯೋಗ

  ಪಂಚಭೂತ ಮಂತ್ರಗಳು

ಹದಿನೈದು ದಿನಗಳ ನಿರಂತರ “ಓಂಕಾರ”ದ ಪಠಣದಿಂದ ಒತ್ತಡಗಳೆಲ್ಲಾ ನಿವಾರಣೆಯಾಗಿ, ಮನಸ್ಸು ಶಾಂತವಾಗುವುದು, ಸಂಶೋಧನೆಯ ಪ್ರಕಾರ “ಓಂಕಾರ”ವು ದೇಹದಲ್ಲಿರುವ ಅಡ್ರಿನಲಿನ್‌ ಸ್ರಾವವನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಮಾನಸಿಕ ಒತ್ತಡವು ನಿಧಾನವಾಗಿ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ ಇದು ಮನಸ್ಸಿನಲ್ಲಿರುವ ಭಯ, ಅಸಮಾಧಾನವನ್ನು ನಿವಾರಣೆಗೊಳಿಸುತ್ತದೆ.
“ಓಂಕಾರ”ದ ಪಠಣವು ನಿಮ್ಮ ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸಿ, ಧನಾತ್ಮಕ ಕಂಪನವನ್ನು ಉಂಟುಮಾಡುತ್ತದೆ. “ಓಂಕಾರ”ದ ಉಚ್ಛಾರಣೆಯು ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. “ಓಂಕಾರ”ದ ಪಠಣದಿಂದ ನಿಮ್ಮ ಹೃದಯದ ಆರೋಗ್ಯ ವೃದ್ಧಿಯಾಗುವುದು ಹಾಗೂ ರಕ್ತ ಸಂಚಾರವೂ ಆರೋಗ್ಯಕರವಾಗುವುದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
“ಓಂಕಾರ”ವು ನಿಮ್ಮಲ್ಲಿರುವ ಉದಾಸೀನತೆಯನ್ನು ಬದಿಗೆ ಸರಿಸಿ, ಉತ್ಸಾಹವನ್ನು ಹೆಚ್ಚಿಸುತ್ತದೆ ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ಮಲಗುವ ಮುನ್ನ 5ನಿಮಿಷ ಓಂಕಾರವನ್ನು ಪಠಿಸಿ. “ಓಂಕಾರ”ದ ಪಠಣದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು. ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದು.
“ಓಂಕಾರ” ಪದವನ್ನು ಉಚ್ಚರಿಸುವಾಗ ನಿಮ್ಮ ದೇಹದಲ್ಲಿ ಉಂಟಾಗುವ ಕಂಪನವನ್ನು ಗಮನಿಸಬಹುದು, ಈ ಕಂಪನವು ಬೆನ್ನು ಮೂಳೆಗೆ ಒಳ್ಳೆಯದು. ಇದರಿಂದಾಗಿ ಬೆನ್ನು ಮೂಳೆಯ ಕಾರ್ಯಕ್ಷಮತೆ ಹೆಚ್ಚಾಗುವುದು. “ಓಂಕಾರ”ದ ಉಚ್ಚಾರಣೆಯು ಗಂಟಲಿನ ಆರೋಗ್ಯಕ್ಕೂ ಒಳ್ಳೆಯದು. ಇದು ಥೈರಾಯ್ಡ್‌ ಗ್ರಂಥಿಯನ್ನು ಆರೋಗ್ಯವಾಗಿಡುವುದು.
“ಓಂಕಾರ” ಪದವು ನಿಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪ್ರವಹಿಸಿ, ಯಾವುದೇ ಕೆಲಸದಲ್ಲೂ ನಿಮ್ಮ ಆತ್ಮ ವಿಶ್ವಾಸ ವೃದ್ಧಿಯಾಗುವಂತೆ ಮಾಡುತ್ತದೆ. ಏಕಾಗ್ರತೆಯು ವೃದ್ಧಿಯಾಗಿ, ನಿಮ್ಮ ಗುರಿಯನ್ನು ಸಾಧಿಸಲು “ಓಂಕಾರ”ವು ಸಹಕರಿಸುವುದು. “ಓಂಕಾರ” ಪಠಣವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸ್ವಯಂ ಪ್ರತಿರೋಧಕವನ್ನು ಉಂಟುಮಾಡುವುದು. “ಓಂಕಾರ”ವನ್ನು ಪಠಿಸುವವರಿಗೆ ಮಾತ್ರವಲ್ಲದೇ, ಅವರ ಸುತ್ತಮುತ್ತಲಿನವರೂ “ಓಂಕಾರ”ದ ಕಂಪನವನ್ನು ಅನುಭವಿಸುವುದರಿಂದ ಇತರರಿಗೂ ಉಪಯೋಗವಾಗುವುದು.
“ಓಂಕಾರ”ವನ್ನು ಪಠಿಸುವುದರಿಂದ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ನೀವು ಮೊದಲ ಬಾರಿ “ಓಂಕಾರ” ಪಠಣ ಆರಂಭಿಸುತ್ತಿದ್ದಲ್ಲಿ ಪ್ರತಿದಿನ 5 ನಿಮಿಷ ಮಾತ್ರ ಮಾಡಿ. ಪ್ರತಿ ದಿನ ಅಭ್ಯಾಸ ಮಾಡುತ್ತಾ ಹಿಡಿತ ಬಂದಂತೆ ಸಮಯವನ್ನು ನಿಧಾನವಾಗಿ ವಿಸ್ತರಿಸುತ್ತಾ ಬನ್ನಿ. ಆರಂಭದಲ್ಲೇ 5 ನಿಮಿಷಕ್ಕಿಂತ ಹೆಚ್ಚು ಅಭ್ಯಾಸ ಮಾಡಿದರೆ ದೇಹದಲ್ಲಿ ಉಂಟಾಗುವ ಶಕ್ತಿಯ ಕಂಪನದಿಂದ ಬಾಧೆಗೊಳಗಾಗಬಹುದು. ಯಾಕೆಂದರೆ “ಓಂ” ಜಪವು ದೇಹದ ಉ‍ಷ್ಣತೆಯನ್ನು ಹೆಚ್ಚಿಸುತ್ತದೆ.
“ಓಂಕಾರ”ದಲ್ಲಿ ಧ್ವನಿ ತರಂಗ ಹಾಗೂ ನಾದಕ್ಕೆ ಭೌತ ಶಾಸ್ತ್ರೀಯ ಮಹತ್ವಗಳನ್ನು ಇವೆ. “ಓಂಕಾರ”ದಲ್ಲಿ “ಉ” ಕಾರ, “ಅ” ಕಾರ ಹಾಗೂ “ಮ” ಕಾರಗಳು ಸೇರುವುದರಿಂದ ಅವುಗಳನ್ನು ಒಟ್ಟಿಗೆ ಉಚ್ಛಾರ ಮಾಡಿದಾಗ ಹೊಟ್ಟೆ ಬೆನ್ನು ಹುರಿ ಗಂಟಲು ಮೂಗು ಹಾಗೂ ಮೆದುಳಿನ ಭಾಗಗಳು ಕ್ರಿಯಾಶೀಲ ಆಗುತ್ತವೆ ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಮನಸ್ಸಿಗೆ ಶಾಂತಿಯು ದೊರೆಯುತ್ತದೆ ಹಾಗೂ ನಮ್ಮ ಒತ್ತಡವೂ ಸಹಾ ಕಡಿಮೆ ಆಗುತ್ತದೆ.
ವೇದಗಳಲ್ಲಿ ಕೊಂಡಾಡಿದ್ದು ಹೇಗೆ.
“ಓಂಕಾರ”ವನ್ನು ಮಹಾ ಮಂತ್ರವೆಂದು ಸ್ವೀಕರಿಸಿದ್ದು ಹೇಗೆ..? ಪ್ರಶ್ನೆಗಳು ಈಗಲೂ ವಿಜ್ಞಾನಿಗಳನ್ನು ಕಾಡುತ್ತವೆ. ನಮ್ಮ ಋಷಿಗಳ ಪ್ರಕಾರ “ಓಂಕಾರ”ವೇ ಪರಮಾತ್ಮನ ನಿಜವಾದ ಹೆಸರು. ”ಓಮಿತ್ಯೇಕಾಕ್ಷರಂ ಬ್ರಹ್ಮ”. ಮಹರ್ಷಿ ಪತಂಜಲಿ ತಿಳಿಸುವಂತೆ “ತಸ್ಯ ವಾಚಕಃ ಪ್ರಣವಃ” ಪ್ರಣವವೆಂದರೆ “ಓಂಕಾರ”. ಸೂರ್ಯನಿಂದ “ಓಂಕಾರ” ನಾದ ಬರಲು ಕಾರಣವಾದರೂ ಏನು..? ಇದಕ್ಕೆ ಉತ್ತರ ಗೀತೆಯಲ್ಲಿದೆ.
ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ :- “ಅರ್ಜುನ, ನಿನಗಿಂದು ಯಾವ ವಿದ್ಯೆಯನ್ನು ನಾನು ಉಪದೇಶಿಸಿದೆನೋ ಈ ವಿದ್ಯೆಯನ್ನು ನಿನಗಿಂತಲೂ ಮೊದಲು ಸೂರ್ಯನಿಗೆ ಉಪದೇಶಿಸಿದ್ದೆ. ಅಂದಿನಿಂದ ಸೂರ್ಯ ನಿರಂತರವಾಗಿ “ಓಂಕಾರ”ವನ್ನು ಜಪಿಸುತ್ತಾ ಲೋಕವನ್ನು ಬೆಳಗುತ್ತಿದ್ದಾನೆ. ಕೇವಲ ಸೂರ್ಯನಷ್ಟೇ ಅಲ್ಲ. ಸಮಸ್ತ ಬ್ರಹ್ಮಾಂಡವೂ “ಓಂಕಾರ”ದಲ್ಲೇ ಅಧೀನವಾಗಿದೆ”
ಓಂ ಅಂದರೆ ವಿಜ್ಞಾನಿಗಳು ಇಂದು ಕಂಡುಹಿಡಿದ ಸತ್ಯವು, ಋಷಿ ಮುನಿಗಳಿಗೆ, ಕೃಷ್ಣನಿಗೆ ಅಂದೇ ತಿಳಿದಿತ್ತು. ಯಾವಾಗ ನಾವು “ಓಂ” ಎಂದು ಜೋರಾಗಿ ಉಚ್ಚರಿಸುತ್ತೇವೋ ಆಗ ನಮ್ಮ ಮನಸ್ಸಿನಲ್ಲಿರುವ ದುಗುಡ, ದುಮ್ಮಾನಗಳು ಖಾಲಿಯಾಗುತ್ತವೆ. “ಓಂಕಾರ”ದ ಜಪ ತೀವ್ರವಾಗುತ್ತಿದ್ದಂತೆ ಬ್ರಹ್ಮಾಂಡದಲ್ಲಿರುವ “ಓಂಕಾರ” ಹಾಗೂ ಸಾಧಕನ “ಓಂಕಾರ” ನಾದಗಳ ಸಮ್ಮಿಲನವಾಗುತ್ತದೆ. ಆ ಸಮಯದಲ್ಲಿ ಸಾಧಕನ ಮನಸ್ಸು ಧ್ಯಾನದಲ್ಲಿ ಕಳೆದು ಹೋಗುತ್ತದೆ. ಈ ಅವಸ್ಥೆಯಲ್ಲಿ ಮನಸ್ಸು ಚೇತನದೊಂದಿಗೆ ಸೇರಿಕೊಳ್ಳುತ್ತದೆ.

Leave a Reply

Your email address will not be published. Required fields are marked *

Translate »