ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದತ್ತ ಗಿರಿನಾರ್ ಕ್ಷೇತ್ರ

ದತ್ತಕ್ಷೇತ್ರಗಳು..!

ಲೇಖಕರು: ಎಸ್.ದತ್ತಾತ್ರಿ (ಭಗವಾನ್)

ದತ್ತನ ಆವಾಸದ – ಗಿರಿನಾರ್

’ದಿಗಂಬರ ದತ್ತ ದಿಗಂಬರ, ಶ್ರೀಪಾದವಲ್ಲಭ ದಿಗಂಬರ’ ಎಂಬ ನುಡಿಯ ಅರ್ಥ ಮಾಡಿಕೊಳ್ಳಲಾಗಲಿ, ದಿಗಂಬರನ ರೂಪದಲ್ಲಿ ದಿಕ್ಕುಗಳನ್ನೇ ಅಂಬರವನ್ನಾಗಿಸಿಕೊಂಡ ದತ್ತನ ದರ್ಶನ ಪಡೆಯಲು ಗಿರಿನಾರ್ ಪ್ರಶಸ್ತವಾದ ಸ್ಥಳ.

ಗುಜರಾತಿನ ಅಹಮದಾಬಾದಿಗೆ ಹೋಗಿ ಅಲ್ಲಿಂದ ೩೫೦ ಕಿಲೋಮೀಟರುಗಳು ದೂರದಲ್ಲಿರುವ ಜುನಾಗಡ್ ಎಂಬಲ್ಲಿಗೆ ಟ್ರೈನಿನಲ್ಲಿ ಹೋಗಬಹುದು. ಅಲ್ಲಿಂದ ಅನೇಕ ರಿಕ್ಷಾಗಳು ಸಿಗುತ್ತವೆ. ಐದಾರು ಕಿಲೋಮೀಟರುಗಳ ದೂರದಲ್ಲಿ ಗಿರಿನಾರ್ ಪರ್ವತವಿದೆ. ಪರ್ವತದ ತುತ್ತ ತುದಿಯಲ್ಲಿಯೇ ದಿಗಂಬರನಾದ ದತ್ತ ಪ್ರಭುವಿನ ಆವಾಸವಿರುವುದು. ಗಿರಿನಾರ್ ಊರಿನಲ್ಲಿ ಅನೇಕ ಧರ್ಮಛತ್ರಗಳಿವೆ. ನಿಮ್ಮ ಗುರುತಿನ ಚೀಟಿ ತೋರಿಸಿ ಉಳಿಯಬಹುದು. ಇದಲ್ಲದೇ ಸುಸಜ್ಜಿತ ಬಾಡಿಗೆಯ ರೂಮುಗಳು ಸಿಗುತ್ತವೆ.

ನೂರಾರು ಋಷಿಮುನಿಗಳು ಇಂದೂ ತಪಗೈಯುತ್ತಿರುವ, ಗಿರಿನಾರ್ ಪರ್ವತವನ್ನು, ಅಲ್ಲಿನ ಜನ ಬಹು ಗೌರವದಿಂದ ’ಗಿರಿನಾರ್ ಜಿ’ ಎಂದೇ ಕರೆಯುತ್ತಾರೆ. ನಮಗೆ ಹಿಮಾಲಯ ಹಾಗೂ ಕೈಲಾಸ ಪರ್ವತವೆಷ್ಟು ಪುನೀತವೋ ಆ ಕಡೆಯ ಜನ ಗಿರಿನಾರ್ ಪರ್ವತಕ್ಕೆ ಅಷ್ಟೊಂದು ಗೌರವ ಕೊಡುವುದು ದತ್ತ ಪ್ರಭುವಿನ ಆವಾಸಸ್ಥಾನ ಅದಾಗಿರುವುದರಿಂದಲೇ. ದೀಪಾವಳಿಯ ನಂತರ ಗಿರಿನಾರ್ ಪರಿಕ್ರಮವೆಂಬ ಆಚರಣೆ ಅಲ್ಲಿದೆ. ಗಿರಿನಾರ್ ಪರ್ವತವನ್ನು (ಸುಮಾರು ೩೫ ಕಿಲೋಮೀಟರ್) ಹಗಲು ರಾತ್ರಿಯೆನ್ನದೇ ಪ್ರದಕ್ಷಿಣೆ ಮಾಡಲು ಲಕ್ಷಾಂತರ ಜನ ಭಕ್ತರು ದೂರದೂರದ ಊರುಗಳಿಂದ ಬರುತ್ತಾರೆ.

ಗಿರಿನಾರ್ ಹಲವಾರು ತೀರ್ಥಸ್ಥಾನಗಳನ್ನು ಹೊಂದಿದೆ. ಬ್ರಹ್ಮನು ನಿರ್ಮಿಸಿರುವ ಒಂದು ಸುಂದರ ಸರೋವರ, ಅದರಲ್ಲಿ ನಿತ್ಯ ದೇವತೆಗಳು ಬಂದು ಸ್ನಾನ ಮಾಡಿ ಹೋಗುತ್ತಾರೆ ಎಂಬ ಪ್ರತೀತಿ ಇದೆ.

  ಪೊಳಲಿ - ಶ್ರೀ ಗಂಧಾಡಿ ಸೋಮನಾಥೇಶ್ವರ

ಭಗವಂತನ ದರ್ಶನ ಅಷ್ಟು ಸುಲಭ ಸಾಧ್ಯವಲ್ಲ. ಅವಧೂತ ಪರಂಪರೆಯ ಮೂಲ ಪುರುಷ ದತ್ತಾತ್ರೇಯರು ಅಷ್ಟೇಕೆ ಎತ್ತರಕ್ಕೆ ನಿಂತರೋ ’ಭಕ್ತಾದಿಚ್ಚೇತ್ ಪರಾಜಯಂ’ ಎಂಬ ಉಕ್ತಿ ಇದೆ. ಅಲ್ಲಿಗೂ ಬಿಡದೇ ಬರುವ ಭಕ್ತರಿಗೆ ದತ್ತ ಪ್ರಭುಗಳ ಆಶೀರ್ವಾದವಂತೂ ಶತಸಿದ್ಧ.

ನಾಲ್ಕಾರು ಪರ್ವತಗಳನ್ನು ಹತ್ತಿಳಿದು ಒಂದು ಸುಮಾರು ಹತ್ತು ಸಾವಿರ ಮೆಟ್ಟಿಲುಗಳನ್ನು ಏರಿಯೇ ದತ್ತ ದರ್ಶನ ಲಭ್ಯ. ಮೊದಮೊದಲು ನಾಥಪಂಥ ಹಾಗೂ ಜೈನಪಂಥದ ಅನೇಕ ದೇಗುಲಗಳು ಸಿಗುತ್ತವೆ. ಭವ್ಯವಾದ ಆ ದೇಗುಲಗಳನ್ನು ನೋಡುತ್ತಾ ಸುತ್ತಲ ರಮಣೀಯ ದೃಶ್ಯಗಳಲ್ಲಿ ಪರಮಾತ್ಮನನ್ನು ಕಾಣುತ್ತಾ ಸಾಗುವ ಭಕ್ತರಿಗೆ ಹತ್ತು ಸಾವಿರ ಮೆಟ್ಟಿಲುಗಳೇನೂ ದೊಡ್ಡದಲ್ಲ. ಇನ್ನು ಕೈಲಾಗದವರಿಗೆ, ವೃದ್ಧರಿಗೆ, ಅಶಕ್ತರಿಗೆ ತಲಾ ಐದರಿಂದ ಆರು ಸಾವಿರ ನೀಡಿದರೆ ಡೋಲಿಯ ವ್ಯವಸ್ಥೆ ಇರುತ್ತದೆ.

ಇಬ್ಬರು ಹೊತ್ತುಕೊಂಡು ಹೋಗುವ ಡೋಲಿಯು ಸ್ವಲ್ಪ ಕಷ್ಟಕರವಾದದ್ದೇ. ನಲವತ್ತೈದು ಡಿಗ್ರೀ ಆಂಗಲ್ ನಲ್ಲಿ ಸಾಗಬೇಕು. ಸುಮಾರು ಒಂದು ಅಡಿ ಎತ್ತರದ ಕಲ್ಲಿನ ಮೆಟ್ಟಿಲುಗಳನ್ನು ಅಂದಿನ ಜುನಾಗಡ್ ನ ಒಬ್ಬ ಪ್ರಾಮಾಣಿಕ ಜಿಲ್ಲಾಧಿಕಾರಿ, ಲಾಟರಿ ಹಾಕಿ, ಅದರಿಂದ ಬಂದ ಹಣದಲ್ಲಿ ಈ ಮೆಟ್ಟಿಲುಗಳನ್ನು ಕಟ್ಟಿಸಿದರು ಎನ್ನುತ್ತಾರೆ.

ಗಿರಿನಾರ್ ಊರಿನಿಂದ ಬೆಟ್ಟದ ಬುಡ ತಲುಪುವಲ್ಲಿ ಅದೇನೇನು ದೇವತೆಗಳು ಬೇಕೋ ಅವರೆಲ್ಲಾ ಸಿಗುತ್ತಾರೆ. ಬೆಳಗಿನ ಆರಕ್ಕೆಲ್ಲಾ ಹೊರಟು ಸಂಜೆಯ ಆರಕ್ಕೆ ದರ್ಶನ ಪಡೆದು ಇಳಿದು ಬರಬಹುದು. ದಾರಿಯುದ್ದಕ್ಕೂ ಲೈಟಿನ ವ್ಯವಸ್ಥೆ ಇರುವುದರಿಂದ ಹಗಲು ರಾತ್ರಿ ಎನ್ನದೇ ಬರುವ ರೈಲಿನ ಪ್ರಯಾಣಿಕರು ಬೆಟ್ಟವೇರುತ್ತಲೇ ಇರುತ್ತಾರೆ. ಜೈನ ಪರಂಪರೆಯ ಭಕ್ತರು ಆ ದೇಗುಲಗಳ ದರ್ಶನಕ್ಕೆ ಅರ್ಧ ದೂರ ಕ್ರಮಿಸಿದರೆ ದತ್ತ ದರ್ಶನಕ್ಕೆ ೧೦೦೦೦ ಮೆಟ್ಟಿಲುಗಳನ್ನೇರಬೇಕು. ಮೆಟ್ಟಿಲೇರುತ್ತಾ, ಏರುತ್ತಾ, ದತ್ತನಾಮಸ್ಮರಣೆ ಮಾಡುತ್ತಾ ಸಾಗಿದರೆ ನಾವೂ ಹಗುರಾಗುತ್ತೇವೆ. ದತ್ತನು ಗಿರಿನಾರ್ ನ ತುತ್ತ ತುದಿಯಲ್ಲಿ, ಪ್ರಶಾಂತ ವಾತಾವರಣದಲ್ಲಿ ನಿರಾಕಾರನೂ, ಸಾಕಾರನೂ, ದಿಗಂಬರನೂ, ಸರ್ವಾಂಭರನೂ ಏನೇನೋ ಎಲ್ಲವೂ ಆಗಿರುವ ದತ್ತ ಪ್ರಭುವಿನ ದರ್ಶನವಾದಾಗ ನಮ್ಮ ಮನಸ್ಸು ಕೆಳಗಿಳಿಯಲೊಪ್ಪದು. ಆದರೆ ಬರುವ ಜನ ಅಧಿಕವಾದಾಗ ನಮಗೆ ಅಲ್ಲಿ ಉಳಿಯಲು ಅವಕಾಶ ಸಿಗದಿರಬಹುದು. ಬಂದವರಿಗೆಲ್ಲಾ ಅಲ್ಲಿಂದ ಸುಮಾರು ೨೦೦ ಮೆಟ್ಟಿಲುಗಳು ಕೆಳಗಿರುವ “ದತ್ತ ಧುನಿ” ಆಶ್ರಮದಲ್ಲಿ ಪ್ರಸಾದ ತೆಗೆದುಕೊಂಡು ಹೋಗಲು ವಿನಂತಿಸುತ್ತಾರೆ. ಅಷ್ಟು ದೂರ ಬಂದ ಮೇಲೆ ದತ್ತ ಪ್ರಸಾದ ಮಹಾ ಪ್ರಸಾದವಾಗಿ ಅಲ್ಲಿ ದೊರೆಯುತ್ತದೆ.

  ದೇವಾಲಯದಲ್ಲಿ ಶಿವನ / ವಿಷ್ಣುವಿನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ಕಮಂಡಲು ತೀರ್ಥವೆಂಬ ಸ್ಥಳವಿದೆ. ಇದರ ಪುರಾಣ ಇತಿಹಾಸ ಹೀಗೆ ಕೇಳಿಬರುತ್ತದೆ. ಇದೊಂದು ಸಿದ್ಧ ಕ್ಷೇತ್ರವಾಗಿರುವುದರಿಂದ ನಾಥ ಪಂಥದವರು ಇಲ್ಲಿ ತಪಸ್ಸು ಮಾಡಿ ಶಕ್ತಿಗಳಿಸಿ, ಜನರಿಗೆ ಸಿಕ್ಕ ಸಿಕ್ಕ ಹಾಗೆ ತೊಂದರೆ ಕೊಡುತ್ತಿದ್ದರಂತೆ. ಕೊನೆಗೆ ದತ್ತಪ್ರಭುವು ಅವರಿಂದ ತಪಶ್ಯಕ್ತಿಯನ್ನು ಕಿತ್ತುಕೊಂಡು ಕಮಂಡಲದಲ್ಲಿ ಹಾಕಿ, ಕಲಕಿ ಸುರಿದ ಜಾಗವೇ ಕಮಂಡಲ ತೀರ್ಥವಾಗಿದೆ. ಜೈನರು, ನಾಥ ಪಂಥದವರು, ದತ್ತ ಭಕ್ತರು ಹೀಗೆ ಎಲ್ಲರಿಗೂ ಗಿರಿನಾರ್ ಒಂದು ದಿವ್ಯ ಕ್ಷೇತ್ರವಾಗಿ, ತ್ರಿವೇಣಿ ಸಂಗಮವಾಗಿದೆ. ದತ್ತನ ಮೂರು ರೂಪಗಳಾಗಿದೆ.

ದತ್ತನಾಗಿ, ರಕ್ಷಕರಾಗಿ ಬಂದ ಶ್ರೀಧರ ಸ್ವಾಮಿಗಳು ಒಂದೊಮ್ಮೆ ಇಲ್ಲಿಗೆ ಬಂದರಂತೆ. ಪಾಕಿಸ್ಥಾನದ ಸರಹದ್ದಿನಲ್ಲಿರುವ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಆ ದೇಶ ಪ್ರಯತ್ನಿಸಿ ದಂಗೆ ಮಾಡುತ್ತಿದ್ದಾಗ, ಶ್ರೀಧರ ಸ್ವಾಮಿಗಳು ಅಲ್ಲಿಗೆ ಹೋಗಿದ್ದರಂತೆ. ಅವರು ಹೋದ ಸಂದರ್ಭಕ್ಕೆ ಅಲ್ಲಿನ ಜನಕ್ಕೆ ಶ್ರೀಧರ ಸ್ವಾಮಿಗಳು ದತ್ತಸ್ವರೂಪರಾಗಿಯೇ ಕಂಡು ಬಂದು, ಅಲ್ಲಿನ ಜನ ದತ್ತನೇ ತಮ್ಮ ರಕ್ಷಣೆಗಾಗಿ ಹೀಗೆ ಬಂದಿದ್ದಾನೆಂದು ನಂಬಿದ್ದರಂತೆ. ಅದರಂತೆ ಪರದೇಶಿಯರ ಉಪಟಳವೂ ಆ ದಿನಗಳಲ್ಲಿ ಕಮ್ಮಿಯಾಗಿದ್ದಿತ್ತೆನ್ನುತ್ತಾರೆ.

  ವಿಜಾಪುರ ಶ್ರೀ ಸಿದ್ದೇಶ್ವರ / ಸಿದ್ಧರಾಮೇಶ್ವರ

ದತ್ತ ಧುನಿಯಲ್ಲಿ ಸಾಧು ಸಂತರುಗಳಿರುತ್ತಾರೆ. ಅವರ ದರ್ಶನ ಪಡೆದು ಪುನೀತರಾಗಿ ಜುನಾಗಡ್ – ಗಿರಿನಾರ್ ಕಡೆಗೆ ಜನ ಪ್ರಯಾಣ ಬೆಳೆಸುತ್ತಾರೆ. ಶ್ರೀಗೋರಕನಾಥ್, ಭರ್ತೃಹರಿ ಮುಂತಾದ ಮಹನೀಯರು ತಪಗೈದ ಜಾಗವಿದು. ಈಗಲೂ ಅನೇಕ ಬಾರಿ, ಗಿರಿನಾರ್ ಪರ್ವತದ ಕಾಡುಗಳಲ್ಲಿ ದಾರಿತಪ್ಪಿ ಪರಿತಪಿಸುವವರಿಗೆ, ಅಂದಿನ ಸಾಧು ಸಂತರು ಕಂಡುಬಂದು ದಾರಿ ತೋರಿಸಿದ ಘಟನೆಗಳು ಆಗಾಗ ಘಟಿಸುವುದಂತೆ.

ದತ್ತ ಪ್ರಭುಗಳ ಅಕ್ಷಯ ನಿವಾಸವಾದ, ಎಂದೆಂದೂ ಮೈದುಂಬಿ ನಿಂತಿರುವ ಗಿರಿನಾರ್ ಪ್ರವಾಸ ಕಷ್ಟಸಾಧ್ಯವಾದರೂ, ದತ್ತ ಭಕ್ತರಿಗೇನೂ ಕಷ್ಟವಲ್ಲ. ಅಹಮದಾಬಾದ್ ನಿಂದ ಒಂದು ರಾತ್ರಿಯ ರೈಲಿನ ಪ್ರಯಾಣವಷ್ಟೇ ಬೆಳಗಿನ ಮುಂಜಾವಿಗೆ ಜುನಾಗಡ್ ತಲುಪಿ ಬಿಡುತ್ತೀರಿ. ದೊಡ್ಡ ವಾಸ್ತವ್ಯದ ಹೋಟೆಲುಗಳು ಬೇಕಾದರೆ ಜುನಾಗಡ್ ಪಟ್ಟಣದಲ್ಲೇ ಉಳಿದೂ ಗಿರಿನಾರ್ ಗೆ ಹೋಗಿ ಬರಬಹುದು. ಊಟ ವಸತಿಯ ಸೌಕರ್ಯಕ್ಕೇನೂ ಕೊರತೆ ಇರುವುದಿಲ್ಲ. ದತ್ತ ಪ್ರಭುವಿನ ಕೃಪೆಯಾದರೆ ಗಿರಿನಾರ್ ಯಾತ್ರೆ ಹೂವಿನ ಸರವೆತ್ತಿದಂತೆಯೇ.

Leave a Reply

Your email address will not be published. Required fields are marked *

Translate »